ಯಮುನಾ
From Wikipedia
ಯಮುನಾ ನದಿಯು ಗಂಗಾ ನದಿಯ ಒಂದು ಪ್ರಮುಖ ಉಪನದಿ. ಯಮುನೆಯ ಉಗಮಸ್ಥಾನ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ. ಯಮುನೋತ್ರಿಯಿಂದ ಸುಮಾರು ೧೩೭೦ ಕಿ.ಮೀ. ಪ್ರವಹಿಸಿದ ನಂತರ ಉತ್ತರಪ್ರದೇಶದ ಅಲಹಾಬಾದ್ (ಪ್ರಯಾಗ)ದಲ್ಲಿ ಯಮುನಾ ನದಿಯು ಗಂಗಾ ನದಿಯನ್ನು ಕೂಡಿಕೊಳ್ಳುತ್ತದೆ. ತನ್ನ ಹಾದಿಯಲ್ಲಿ ಯಮುನೆಯು ಉತ್ತರಾಖಂಡ, ಹರ್ಯಾಣ, ದೆಹಲಿ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಹರಿಯುವಳು. ದೆಹಲಿ, ಮಥುರಾ ಮತ್ತು ಆಗ್ರಾ ಯಮುನಾ ನದಿಯ ತೀರದ ಪ್ರಮುಖ ಪಟ್ಟಣಗಳು. ಗಂಗಾ ನದಿಯ ಅತ್ಯಂತ ದೊಡ್ಡ ಉಪನದಿಯಾದ ಯಮುನಾ ನದಿಗೆ ಉಪನದಿಗಳು ಹಲವು. ಇವುಗಳಲ್ಲಿ ಮುಖ್ಯವಾದುವೆಂದರೆ- ಚಂಬಲ್ , ಬೇತ್ವಾ , ತೋನ್ಸ್ ಮತ್ತು ಕೇನ್. ಇವುಗಳಲ್ಲಿ ತೋನ್ಸ್ ಎಲ್ಲಕ್ಕಿಂತ ಉದ್ದವಾದುದು.
[ಬದಲಾಯಿಸಿ] ಪ್ರಾಚೀನ ಇತಿಹಾಸ ಮತ್ತು ಪುರಾಣ
ಒಂದೊಮ್ಮೆ ಯಮುನಾ ನದಿಯು ಘಗ್ಗರ್ ನದಿಯ ಉಪನದಿಯಾಗಿದ್ದಿತೆಂಬುದಕ್ಕೆ ಪುರಾವೆಗಳು ಲಭಿಸಿವೆ. ಮುಂದೆ ಉತ್ತರ ಭಾರತದಲ್ಲಿ ಸಂಭವಿಸಿದ ಭೂಪದರಗಳ ಚಲನೆಯಿಂದಾಗಿ ಯಮುನಾ ನದಿಯು ತನ್ನ ಪಾತ್ರವನ್ನು ಬದಲಿಸಿಕೊಂಡು ಗಂಗಾ ನದಿಯನ್ನು ಕೂಡಿಕೊಂಡಿತು. ಪುರಾಣಗಳ ಪ್ರಕಾರ ನದಿಯ ದೇವತೆಯಾದ ಯಮುನೆ ಅಥಾವ ಯಮಿಯು ಯಮನ ಸಹೋದರಿ ಹಾಗೂ ವಿವಶ್ವತ ಮತ್ತು ಸಂಜನಾರ ಮಗಳು. ಯಮುನಾ ನದಿಯಿಂದಾದ ಕಲ್ಪಿ ದ್ವೀಪದಲ್ಲಿಯೇ ಮಹಾಭಾರತದ ವೇದವ್ಯಾಸರು ಜನಿಸಿದ್ದು. ಯಮುನಾ ನದಿಯ ಬೊಗಸೆಯಷ್ಟ್ಟು ನೀರು 'ಸೋಮಯಾಗ'ದ ಸಾಧನೆಗೆ ಕಾರಣವಾಯಿತಂತೆ. ಮಥುರಾ ಮತ್ತು ಬೃಂದಾವನಗಳಲ್ಲಿ ಹರಿಯುವ ಯಮುನಾ ನದಿಯು ಶ್ರೀಕೃಷ್ಣನ ಚರಿತ್ರೆಯೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ.
[ಬದಲಾಯಿಸಿ] ವಿವಿಧ ಹೆಸರುಗಳು
ಯಮುನೆಯನ್ನು ಜಮುನ ಎಂದೂ ಕರೆಯುತ್ತಾರೆ. ಪ್ರಸಿದ್ದ ಇತಿಹಾಸಕಾರ ತಾಲೆಮಿಯ ಬಾಯಲ್ಲಿ ದಯಾಮೌನ ಎಂದೂ, ಲೀನಿ ಬಾಯಲ್ಲಿ 'ಜೋಮಾನ್ಸ್' ಎಂದೂ ,ಅರಿಯನ್ ಎಂಬಾತನ ಬಾಯಲ್ಲಿ ಜೋಬೇರ್ಸ್ ಎಂದೂ ಹೆಸರು ಪಡೆದಿದೆ. ಪ್ರಯಾಗ್ ದಲ್ಲಿನ ಹರಿದ್ವಾರದ ವರೆಗೆ ಗಂಗಾ-ಯಮುನಾ ನದಿಗಳು ಸೇರುವವರೆಗಿನ ಬಯಲನ್ನು ಅಂತರ್ವೇದಿ, ಶಾಶಸ್ತಳಿ ಮತ್ತು ಬ್ರಹ್ಮಾವರ್ತ ಎಂದೂ ಕರೆಯಲಾಗಿದೆ.
[ಬದಲಾಯಿಸಿ] ಇತರೆ ವಿಷಯಗಳು
ಇಂದು ಯಮುನಾ ನದಿಯು ವಿಶ್ವದ ಅತ್ಯಂತ ಕಲುಷಿತವಾದ ನದಿಗಳಲ್ಲಿ ಒಂದು. ಈ ಮಾಲಿನ್ಯದ ಹೆಚ್ಚಿನ ಪಾಲು ದೆಹಲಿ ನಗರದ ತ್ಯಾಜ್ಯವಸ್ತುಗಳು. ಯಮುನೆಯನ್ನು ಶುದ್ಧೀಕರಿಸುವ ಹಲವು ಪ್ರಯತ್ನಗಳು ನಡೆದರೂ ಅವೆಲ್ಲವೂ ವಿಫಲವಾಗಿವೆ. ಸಟ್ಲೆಜ್-ಯಮುನಾ ಲಿಂಕ್ ನಾಲೆಯೆಂದು ಕರೆಯಲ್ಪಡುವ ನೌಕಾಯಾನ ಕಾಲುವೆಯೊಂದು ಈಗ ನಿರ್ಮಾಣ ಹಂತದಲ್ಲಿದೆ. ಇದು ಪೂರ್ಣಗೊಂಡಾಗ ಭಾರತದ ಪೂರ್ವಭಾಗದಿಂದ ಪಶ್ಚಿಮಭಾಗದವರೆಗೆ ಒಳನಾಡು ನೌಕಾಯಾನ ಸಾಧ್ಯವಾಗಲಿದೆ. ಕೃಷಿಗಾಗಿ ಯಮುನೆಯ ಮೊದಲ ಕಾಲುವೆಯನ್ನು ೧೮೩೦ ರಲ್ಲಿ ತೆರೆಯಲಾಯಿತು. ಸಹಾರನ್ ಪುರ, ಮುಝಫ್ಫರ್ ನಗರ, ಮೀರತ್ ಜಿಲ್ಲೆಗಳಿಗೆ ನೀರುಣಿಸುವ ಇದು, ಯಮುನೆಯ ಪೂರ್ವ ಕಾಲುವೆ. ಪಶ್ಚಿಮ ಕಾಲುವೆ ಅಂಬಾಲ, ಕರ್ನಾಲ್, ಹಿಸ್ಸಾರ್, ದಿಲ್ಲಿ ಪ್ರದೇಶಗಳಲ್ಲಿ ಕೃಷಿಗೆ ಆಧಾರವಾಗಿದೆ. ಈ ಕಾಲುವೆಯನ್ನು ೧೩೫೬ ತ್ರಲ್ಲಿ ಮೂರನೇ ಫಿರೂಜ್ ಶಹ ಸುಲ್ತಾನ ನಿರ್ಮಿಸಿದ. ೧೫೬೮ ರಲ್ಲಿ ಅಕ್ಬರ್ ಬಾದಶಹನಿಂದ ಜೀರ್ಣೋದ್ದಾರ ಹೊಂದಿತು. ತನ್ನ ಜನ್ಮಸ್ಥಾನವಾದ ಕಲಿಂದ ಶಿಖರದಿಂದ ೮೬೦ ಮೈಲಿ ಹರಿದು ಗಂಗೆಯನ್ನು ಸೇರುವ ಈ ಕಲಿಂದಕನ್ಯೆ ಅರ್ಥಾತ್ ಯಮುನೆಗೆ ಬಾನ್ ಗಂಗಾ, ಚಂಬಲ್ ಹಾಗೂ ಬೇತ್ವಾ ನದಿಗಳು ಸೇರುತ್ತದೆ. ಯಮುನೆಯ ನೀರು ತಿಳಿನೀಲಿ ಅಥವಾ ಕಪ್ಪು ಬಣ್ಣದಂತೆ ಗೋಚರಿಸುತ್ತದೆ.