ಧರ್ಮಸ್ಥಳ
From Wikipedia
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು.ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ.ಇಲ್ಲಿಯ ಆರಾದ್ಯ ದೈವ ಮಂಜುನಾಧ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ.
[ಬದಲಾಯಿಸಿ] ಇತಿಹಾಸ
ಈ ಕ್ಷೇತ್ರಕ್ಕೆ ಸುಮಾರು ಏಳ ರಿಂದ ಎಂಟುನೂರು ವರುಷಗಳ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು "ಕುಡುಮ" ಎಂಬುದಾಗಿತ್ತು. ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ-ಪತಿ ವಾಸವಾಗಿದ್ದರು. ಒಮ್ಮೆ ಇವರ ಮನೆಗೆ ನಾಲ್ಕು ಮಂದಿ ಅತಿಥಿಗಳು ಬಂದರು. ಇವರನ್ನು ನೇಮ ನಿಷ್ಠೆಯಿಂದ ಈ ದಂಪತಿಗಳು ಅತಿಥಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟು ಕೊಟ್ಟರು. ಕಾಳರಾಹು, ಕಾಳಕಾಯ, ಕುಮಾರಸ್ವಾಮಿ,ಹಾಗೂ ಕನ್ಯಾಕುಮಾರಿ ಆ ಮನೆಯಲ್ಲಿ ನೆಲೆನಿಂತರು. ಆ ದೈವಗಳ ಆಜ್ಞೆಯಂತೆ ಪರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಅರ್ಚಕರು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಧರ್ಮದೇವತೆಗಳು ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.